ರಾಜ್ಯ ಸರ್ಕಾರದಿಂದ ಬಂಜಾರ ಸಮಾಜದ ಸೇವಾಲಾಲ ಮಾಲಾಧಾರಿಗಳ ಮೇಲೆ ಕೇಸ್ ದಾಖಲು, ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಖಂಡನೆ: ಕ್ಷಮೆ ಯಾಚಿಸಲು ಆಗ್ರಹ

ಕುಕನೂರ: ಛಾಯಾಗಡ್ ನಲ್ಲಿ ನಡೆದ ಸಂತ ಶ್ರೀ
ಸೇವಾಲಾಲ್ ರ 287 ನೇ ಜಯಂತೋತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿ ಭಾಷಣ ಮಾಡುವ ಸಂದರ್ಭದಲ್ಲಿ ಬಂಜಾರ ಸಮಾಜದ ಹೋರಾಟದ ಬಗ್ಗೆ ಹಗುರುವಾಗಿ ಮಾತನಾಡಿದಕ್ಕೆ ಸೇವಾಲಾಲ ಮಾಲಾಧಾರಿಗಳು ಮತ್ತು ಯುವಕರು ಒಳ ಮೀಸಲಾತಿ ಜಾರಿಯಲ್ಲಿ ರಾಜಕೀಯ ತೀರ್ಮಾನ ಮಾಡಿ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿರುವುದನ್ನು ಖಂಡಿಸುತ್ತೇವೆ ಗೋ ಬ್ಯಾಕ್ ಎಂದು ಪ್ರತಿಭಟನೆ ಮಾಡಿದ್ದಕ್ಕೆ ಬಂಜಾರ ಮಾಲಾಧಾರಿಗಳು ಮತ್ತು ಯುವಕರ ಮೇಲೆ ಸರ್ಕಾರ ಕೇಸ್ ದಾಖಲಿಸಿರುವುದನ್ನು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಖಂಡಿಸಿದ್ದಾರೆ.
ಈ ಕುರಿತು ಗೋರ ಸೇನಾ ಮುಖಂಡರು ಪತ್ರಿಕಾ ಹೇಳಿಕೆ ನೀಡಿದ್ದು ಬಂಜಾರ ಸಮುದಾಯದ ಮಾಲಾದಾರಿಗಳು, ಯುವಕರು ಫೆ.14 ರಂದು ನಡೆದ ಸದ್ಗುರುಶ್ರೀ ಸೇವಾಲಾಲ ಜಯಂತೋತ್ಸವದಲ್ಲಿ ಸರ್ಕಾರದ ಅವೈಜ್ಞಾನಿಕ ಒಳ ಮಿಸಲಾತಿ ಜಾರಿಯಲ್ಲಿ ಬಂಜಾರ ಸಮಾಜಕ್ಕೆ ಮಾಡಿರುವ ಅನ್ಯಾಯದ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿ ಗೊ-ಬ್ಯಾಕ್ ಎಂದು ಹಕ್ಕೋತ್ತಾಯ ಮಾಡಿದ್ದರು.ಇದಕ್ಕೆ ಕೆರಳಿದ ಡಿಕೆಶಿ ವೇದಿಕೆಯಲ್ಲೇ ನಿಂತು ನಿಮ್ಮ ಹೋರಾಟಕ್ಕೆ ನಾನು ಜಗ್ಗಲ್ಲ, ಬಗ್ಗಲ್ಲ ಎಂದು ಇಡೀ ಸಮಾಜಕ್ಕೆ ಸವಾಲು ಹಾಕಿ ಅವಮಾನಿಸಿದ್ದಾರೆ.
ಇನ್ನು ಮುಂದುವರೆದು ಅವರ ಕೆಲವು ಹಿಂಬಾಲಕರ ಮಾತು ಕೇಳಿ ನಮ್ಮ ಸಮಾಜದ ಮಾಲಾಧಾರಿಗಳು, ಹೋರಾಟಗಾರರು ಮತ್ತು ಯುವಕರ ಮೇಲೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿರುವುದು ಅತ್ಯಂತ ಖಂಡನೀಯ ಮತ್ತು ನಮ್ಮ ಸಮಾಜದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ.
ನಮ್ಮ ಸಮಾಜಕ್ಕೆ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಮನಗಂಡು ಮತ್ತು ನಮ್ಮ ಸಮುದಾಯದವರ ಭಾವನೆಗೆ ಬೆಲೆ ನೀಡಿ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ ನಾಯ್ಕ, ಪ್ರಭು ಚವ್ಹಾಣ್, ಬಾಬುರಾವ್ ಚವ್ಹಾಣ್ ಸೇರಿದಂತೆ ಬಹುತೇಕ ಹಾಲಿ ಶಾಸಕರು, ಮಾಜಿ
ಶಾಸಕರು, ಪ್ರಮುಖರು ಗೈರು ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಸಮಾಜದ ಆಕ್ರೋಶ ಸ್ಫೋಟಗೊಳ್ಳಬಹುದು ಎಂಬುದು ರಾಜ್ಯ ಸರ್ಕಾರದ ಗೃಹ ಇಲಾಖೆ ಮತ್ತು ಗುಪ್ತಚರ ಇಲಾಖೆಗೂ ಮೊದಲೇ ತಿಳಿದಿರುವುದರಿಂದ ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಬಹುತೇಕ ಎಲ್ಲಾ ಸಚಿವರು ಗೈರು ಆಗಿದ್ದರು.
ಆದರೆ ಸ್ವತಃ ಡಿಕೆಶಿ ಹೇಳಿಕೆ ನೀಡಿರುವಂತೆ ಅವರೇ ಕಾರ್ಯಕ್ರಮಕ್ಕೆ ಉದ್ದೇಶಪೂರ್ವಕವಾಗಿ ಆಗಮಿಸಿ ನಮ್ಮ ಸಮಾಜವನ್ನು ಅವಮಾನಿಸಿದ್ದಾರೆ. ವೇದಿಕೆಯಲ್ಲಿ ನಮ್ಮ ಸಮಾಜಕ್ಕೆ ಆಗಿರುವ ನೋವನ್ನು
ಆಲಿಸದೇ ಕನಿಷ್ಠ ಪಕ್ಷ ಮನವಿ, ಅಹವಾಲು ಹೇಳಿಕೊಳ್ಳಲು ಅವಕಾಶವನ್ನು ಕೂಡ ನೀಡದೇ ನಾವು ನಿಮಗೆ ಮೀಸಲಾತಿಯಲ್ಲಿ ನ್ಯಾಯ ಕೊಟ್ಟಿದ್ದೇವೆ, ಬಂಜಾರ ನಿಗಮ ಮಾಡಿದ್ದೇವೆ ಎಂದು ಸುಳ್ಳು ಹೇಳಿ ಸಮಾಜದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಈಗ ನ್ಯಾಯಕ್ಕಾಗಿ ಪ್ರಶ್ನೆ ಮಾಡಿದವರ ಮೇಲೆಯೇ ಕೇಸ್ ದಾಖಲಿಸಿರುವುದು ನಮ್ಮ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ.
ಈ ಕೂಡಲೇ ರಾಜ್ಯ ಸರ್ಕಾರ ನಮ್ಮ ಮಾಲಾಧಾರಿಗಳ ಮೇಲೆ ಹಾಕಿರುವ ಎಫ್.ಐ.ಆರ್. ರದ್ದುಪಡಿಸಬೇಕು ಮತ್ತು ನಮ್ಮ ಸಮಾಜದ ಕ್ಷಮೆ ಕೇಳಬೇಕು ಹಾಗೂ ನಮ್ಮ ಸಮಾಜಕ್ಕೆ ಒಳಮೀಸಲಾತಿ ಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲದಿದ್ದರೆ ನಮ್ಮ ಸಮಾಜದ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಈ ಪತ್ರಿಕಾ ಹೇಳಿಕೆಯಲ್ಲಿ ಗೋರ ಸೇನಾ ಮುಖಂಡರಾದ ವಿಶ್ವನಾಥ ಬಳಿಗೇರಿ, ಯಮನೂರಪ್ಪ ಭಾನಾಪುರ,ಪ್ರಕಾಶ ಬಳಗೇರಿ,ಹನುಮಂತ ಚವ್ಹಾಣ,ರಾಘವೇಂದ್ರ ಬಳಿಗೇರಿ,ನಾಗರಾಜ ಭಾನಾಪುರ, ಮಹೇಶ ಕಾರಭಾರಿ,ಶಶಿಕುಮಾರ ಕಾರಭಾರಿ, ವಿಜಯ ಚವ್ಹಾಣ,ಇತರೆ ಮುಖಂಡರು ಪತ್ರಿಕಾ ಹೇಳಿಕೆ ನೀಡಿದರು.
ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713